ಇದು ಕಥೆಯಲ್ಲ! ಜವರಾಯನ ಅಟ್ಟಹಾಸ ! ಅರಬೈಲ್ ಘಾಟ್ ಕರಾಳ ಮುಖ....
6 ಮೈಲು ಉದ್ದದ ಈ ರಸ್ತೆಯ ಗುಂಟ ಸಂಭವಿಸಿದ ಅಪಘಾತ, ಸಾವು ನೋವುಗಳನ್ನು
ಲೆಕ್ಕವಿಟ್ಟವರಾರು ? ತಮ್ಮ ಆಪ್ತರನ್ನು ; ಬಂಧುಗಳನ್ನು ಕಳೆದುಕೊಂಡವರ ಕಣ್ಣೀರನ್ನು ಈ ಅರಬೈಲ್ ಘಾಟ್ ಎಂಬ ಸ್ಮಶಾನಸದೃಶ ರಸ್ತೆ ಅದೆಷ್ಟು ತಣ್ಣಗೆ ಇಂಗಿಸಿಕೊಳ್ಳುತ್ತಿದೆ! ಹಾಗಿದ್ದರೆ,ದಟ್ಟ ಹಸಿರು, ಬೆಟ್ಟ-ಗುಡ್ಡಗಳ ನಡುವೆ ಹಾವಿನಂತೆ ಹರಿದಿರುವ ರಾಷ್ಟ್ರೀಯ ಹೆದ್ದಾರಿ 63 ರ ಮೇಲಿರುವ ಈ ಅರಬೈಲ್ ಘಾಟ್ ಅಷ್ಟೊಂದು ಕ್ರೂರಿಯಾ? ಪ್ರಕೃತಿ ಬೆಡಗಿನ ಜೊತೆಯಲ್ಲೇ ಅಂಥಹುದೊಂದು ಕರಾಳ ಮುಖವನ್ನೂ ಈ ಘಾಟ್ ಹೊಂದಿದೆಯಾ? ಇತ್ತೀಚಿನ
ದಿನಗಳಲ್ಲಿ ಪ್ರತಿನಿತ್ಯವೂ ಅಪಘಾತಗಳು ಸಂಭವಿಸುತ್ತಿರುವದನ್ನು ಗಮನಿಸಿದರೆ, ಇದು ಅರಬೈಲ್ ಘಾಟೋ ಅಥವಾ ಸ್ಮಶಾನ ಘಟ್ಟವೊ ಅನಿಸುತ್ತದೆ.

ಕಳೆದ 6 ವರ್ಷಗಳ ಹಿಂದೆ ಮ್ಯಾಂಗನೀಸ್ ಅದಿರು ಉದ್ಯಮ ಪ್ರಾರಂಭವಾಗುವವರೆಗೂ ಶಾಂತವಾಗಿಯೇ ಇತ್ತು ಈ ಘಾಟ್.ಆದರೆ,ಎಂದು ಅದಿರು ಉದ್ಯಮ ಪ್ರಾರಂಭಗೊಂಡು ಬಳ್ಳಾರಿ-ಬೆಲೆಕೇರಿಗಳ ನಡುವೆ ಮ್ಯಾಂಗನೀಸ್ ಅದಿರನ್ನು ತುಂಬಿಕೊಂಡ ಲಾರಿಗಳು ಇರುವೆಗಳ ಸಾಲಿನಂತೆ ಹರಿದುಬರತೊಡಗಿದವೋ ಅಂದಿನಿಂದಲೇ ಪ್ರಾರಂಭಗೊಂಡಿತು ಹೆದ್ದಾರಿಯಲ್ಲಿ ಸಾವಿನ ಸರಮಾಲೆ.
ಇದೀಗ ರಾ.ಹೆ.63ರಲ್ಲಿ ಪ್ರತಿನಿತ್ಯ ಇತರೇ ವಾಹನಗಳನ್ನು ಹೊರತುಪಡಿಸಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅದಿರು ವಾಹನಗಳು ಸಂಚರಿಸುತ್ತಿವೆ. ಅಂತೆಯೇ ಸಾವು ನೋವುಗಳ ಸಂಖ್ಯೆಯೂ ವಿಪರೀತವಾಗಿ ಹೆಚ್ಚಿದೆ.ಕಡಿಮೆಯೆಂದರೂ ಪ್ರತಿದಿನ ಎರಡು ಅಪಘಾತಗಳು,ಎರಡಾದರೂ ಗಂಭೀರ ಗಾಯದ ಪ್ರಕರಣಗಳಷ್ಟೇ ಅಲ್ಲದೆ,ತಿಂಗಳಿಗೊಂದಾದರೂ ಜೀವಬಲಿ ನಡೆಯುತ್ತದೆ.ದಾಖಲೆಗಳ ಪ್ರಕಾರ ಕಳೆದ ವರ್ಷ ಸಂಭವಿಸಿದ ಅಪಘಾತಗಳಲ್ಲಿ ಮಡಿದವರ ಸಂಖ್ಯೆ 20 ಕ್ಕೂ ಹೆಚ್ಚು .ಗಂಭೀರವಾಗಿ ಗಾಯಗೊಂಡವರ ಸಂಖ್ಯೆ ಇದರ ನಾಲ್ಕು ಪಟ್ಟು ಹೆಚ್ಚು.ಇವುಗಳಲ್ಲಿ ಹೆಚ್ಚಿನ ಅಪಘಾತಗಳಿಗೆ ಮ್ಯಾಂಗನೀಸ್ ಅದಿರು ಲಾರಿ ಚಾಲಕರೇ ಕಾರಣವಾಗುತ್ತಾರೆ.ಇಕ್ಕಟ್ಟಿನ ತಿರುವುಗಳು,ಅಲ್ಲಲ್ಲಿ ಕೆಟ್ಟು ರಸ್ತೆಯ ಮಧ್ಯದಲ್ಲಿಯೇ ನಿಲ್ಲುವ ವಾಹನಗಳು,ವಾಹನಗಳ ನಡುವಿನ ವೇಗದ ಪೈಪೋಟಿಗಳೂ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.

ಅದಿರು ಲಾರಿ ಚಾಲಕರು ನಿರಂತರವಾಗಿ ನಿದ್ರೆಯನ್ನೂ ಬಿಟ್ಟು ತಿರುವುಗಳನ್ನೂ ಲೆಕ್ಕಿಸದೆ ವೇಗವಾಗಿ ವಾಹನಗಳನ್ನು ಚಾಲಿಸುವದರಿಂದ ಅಪಘಾತಗಳು ಸಂಭವಿಸುವದು ಹೆಚ್ಚಾಗಿದೆ.ಇದರ ಜೊತೆಗೆ ಪೈಪೋಟಿಯ ಚಾಲನೆ,ವಾಹನಗಳಲ್ಲಿರುವ ಯಾಂತ್ರಿಕ ದೋಷ,ಅನನುಭವಿ ಚಾಲಕರು,ವಾಹನ ಚಾಲನೆ ಮಾಡುವಾಗಲೂ ಮದ್ಯಪಾನ ಮಾಡಿರುವದು ಇವೇ ಮುಂತಾದ ಅಂಶಗಳೂ ಈ ಘಾಟ್ನಲ್ಲಿ ಸಾವುನೋವುಗಳಿಗೆ ಕಾರಣವಾಗಿದೆ.ಅಪಘಾತ ಸಂಭವಿಸಿದ ನಂತರ ಅಗತ್ಯವಾದ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗದೇ ಹಲವರು ಸಾವನ್ನಪ್ಪಿದ್ದಾರೆ.ಯಲ್ಲಾಪುರ ಆರಕ್ಷಕ ಠಾಣೆಯಿಂದ ಅಧಿಕಾರಿಗಳು 22 ಕಿ.ಮೀ ದೂರವಿರುವ ಅರಬೈಲ್ ಘಾಟ್ಗೆ ತಲುಪಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವವರೆಗೆ ಪರಿಸ್ಥಿತ ಕೈಮೀರಿ ಗಾಯಾಳುಗಳು ಮಾರ್ಗದ ಮಧ್ಯದಲ್ಲಿಯೇ ಮೃತಪಟ್ಟಿರುವ ಉದಾಹರಣೆಗಳೂ ಇವೆ.

---ಸತೀಶ್ ಮಾಗೋಡ್
No comments:
Post a Comment